ಉಡುಪಿ ನ.26: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ವಿರುದ್ಧದ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಲಾರಿ ಚಾಲಕ ಮತ್ತು ಮಾಲಿಕ ಇಂದು ಪೊಲೀಸರಿಗೆ ಶರಣಾಗಿದ್ದಾರೆ.
ಲಾರಿ ಮಾಲಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಕೊರಂಗ್ರಪಾಡಿ-ಅಲೆವೂರು ರಸ್ತೆಯಲ್ಲಿ ಲಾರಿಯೊಂದು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ನಗರ ಠಾಣೆಗೆ ಕರೆ ಮಾಡಿ ನಿನ್ನೆ ಬೆಳಿಗ್ಗೆ ಮಾಹಿತಿ ನೀಡಿದ್ದರು.
ಅವರು ನೀಡಿದ ಮಾಹಿತಿಯ ಮೇರೆಗೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮಾನಸ ಬಸ್ ನಿಲ್ದಾಣದ ಬಳಿ ಟಿಪ್ಪರ್ ಲಾರಿ ನಿಲ್ಲಿಸಿ ಐದಾರು ಜನರು ಚಾಲಕನೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ವಿಭಿನ್ನ ನೋಂದಣಿ ನಂಬರ್ ಪ್ಲೇಟ್ಗಳನ್ನು(ಲಾರಿಯಲ್ಲಿ ಕೆಎ19 ಡಿ 1684 ಮತ್ತು ಕೆಎ19 ಡಿ1685 )ಹೊಂದಿದ್ದೂದು ಕಂಡು ಬಂದಿದೆ. ಹಾಗೂ ವಾಹನದಲ್ಲಿ ಮರಳು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ.
ಆ ತಕ್ಷಣ ಪೊಲೀಸರು ಚಾಲಕನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಾರಿ ಚಾಲಕನೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸುತ್ತಿದ್ದಾಗ, ಪೊಲೀಸ್ ಪೇದೆ ಟಿಪ್ಪರ್ ಅನ್ನು ಠಾಣೆಗೆ ತರುವಂತೆ ಚಾಲಕನಿಗೆ ತಿಳಿಸಿದ್ದರು.
ಆದರೆ ಲಾರಿ ಚಾಲಕ ಪೇದೆಯ ಕೊರಳಪಟ್ಟಿ ಎಳೆದು ತಳ್ಳಿ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಚಾಲಕನ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವಿಚಾರ ಎಲ್ಲೆಡೆ ಪ್ರಚಾರ ಪಡೆಯುತ್ತಿದ್ದಂತೆ ಲಾರಿಯಲ್ಲಿ ಮರಳನ್ನು ತುಂಬಿಸಿ ನಗರ ಠಾಣೆಗೆ ಚಾಲಕ ಮತ್ತು ಮಾಲಕ ಲಾರಿ ಸಮೇತ ಸರೆಂಡರ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ